ಎ ಚಿತ್ರವನ್ನು ಕನ್ನಡ ಚಿತ್ರರಂಗ ಮರೆಯುವಂತೆಯೇ ಇಲ್ಲ. ಅದು ರಿಯಲ್ ಸ್ಟಾರ್ ಹುಟ್ಟಿದ ಸಿನಿಮಾ. ಕನ್ನಡ ಚಿತ್ರರಂಗದ ದಿಕ್ಕು ದೆಸೆಯನ್ನೇ ಬದಲಿಸಿದ ಸಿನಿಮಾ. ಸಿನಿಮಾವನ್ನು ಹೀಗೂ ಮಾಡಬಹುದು ಎಂದು ತೋರಿಸಿಕೊಟ್ಟ ಸಿನಿಮಾ. ಆ ಚಿತ್ರಕ್ಕೆ ಹೀರೋ ಕಂ ಡೈರೆಕ್ಟರ್ ಉಪೇಂದ್ರ. ನಿರ್ಮಾಪಕರು ಬಿ.ಜಿ.ಮಂಜುನಾಥ್. ರಾಜು ಜಗನ್ನಾಥ್ ಮತ್ತು ಅಜಯ್. ಈ ಮೂವರೂ ಈಗ ಮತ್ತೊಮ್ಮೆ ಒಂದಾಗುತ್ತಿದ್ದು, ಆ ಚಿತ್ರಕ್ಕೆ ಹೀರೋ ಆಗಿರುವುದು ಉಪೇಂದ್ರ. ಎ ಜೋಡಿಯ ಪುನರ್ಮಿಲನದ ಚಿತ್ರವಿದು.
25 ವರ್ಷಗಳ ನಂತರ ಎ ಜೋಡಿ ಒಂದಾಗುತ್ತಿದೆ. ವಿಶೇಷವೆಂದರೆ ಇದು ಭಕ್ತಿಪ್ರಧಾನ ಸಿನಿಮಾ. ಕಥೆ ಬರೆಯುತ್ತಿರುವುದು ಜೆಕೆ ಭಾರವಿ. ಅನ್ನಮಯ್ಯ, ಶ್ರೀರಾಮದಾಸು ಹಾಗೂ ಕನ್ನಡದಲ್ಲಿ ಹಬ್ಬ, ಶ್ರೀಮಂಜುನಾಥ, ಮುನಿರತ್ನ ಕುರುಕ್ಷೇತ್ರ ಚಿತ್ರಗಳಿಗೆ ಕಥೆ ಬರೆದಿದ್ದ ಭಾರವಿ, ಈ ಚಿತ್ರಕ್ಕೆ ಕಥೆ ಬರೆಯುತ್ತಿದ್ದಾರಂತೆ. ಭಕ್ತ ಕನಕದಾಸರ ಜೀವನ ಚರಿತ್ರೆಯನ್ನು ಆಧರಿಸಿದ ಕಥೆಯಂತೆ. ನೇರವಾಗಿ ಕನಕದಾಸರ ಕಥೆಯೇ.. ಈ ಚಿತ್ರಕ್ಕೆ ನಾಗಣ್ಣ ನಿರ್ದೇಶಕರಾಗಲಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ಭಕ್ತ ಕನಕದಾಸ ಚಿತ್ರ ಐತಿಹಾಸಿಕ ಕ್ಲಾಸಿಕ್ ಎಂದೇ ಕರೆಸಿಕೊಂಡಿದೆ. ಡಾ.ರಾಜ್ ಕುಮಾರ್ ಅವರನ್ನು ಭಕ್ತರು ಕನಕದಾಸರೆಂದೇ ಭಾವಿಸುವಷ್ಟರಮಟ್ಟಿಗೆ ಆ ಚಿತ್ರ ಯಶಸ್ಸು ಕಂಡಿತ್ತು. ಈಗ ಆ ಕಥೆಯಲ್ಲಿ ಉಪೇಂದ್ರ ನಟಿಸಲಿದ್ದಾರೆ. ಹಂಸಲೇಖ ಸಾಹಿತ್ಯ-ಸಂಗೀತ ಇರಲಿದೆ.