ಡಿಂಪಲ್ ಕ್ವೀನ್ ರಚಿತಾ ರಾಮ್ ದೈವಭಕ್ತೆ. ಇದೀಗ ಆ ದೈವಭಕ್ತಿ ದೈವಗಳ ಮೇಲೆಯೂ ಹೆಚ್ಚಾಗಿರುವಂತೆ ಕಾಣುತ್ತಿದೆ. ನಾನು ಆಂಜನೇಯನ ಭಕ್ತೆ ಎಂದ ಹೇಳಿಕೊಳ್ಳೋ ರಚಿತಾ ರಾಮ್, ಇದೇ ಮೊದಲ ಬಾರಿ ಕೊರಗಜ್ಜನ ಪೂಜೆ ಮಾಡಿದ್ಧಾರೆ. ಮಂಗಳೂರು ಹೊರವಲಯದ ಕುತ್ತಾರು ಕೊರಗಜ್ಜನ ಆದಿಕ್ಷೇತ್ರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಕೊರಗಜ್ಜನಿಗೆ ನನ್ನ ಸಿನಿಮಾಗಳು ಯಶಸ್ಸು ಕಾಣಲಿ ಎಂದು ಪ್ರಾರ್ಥನೆ ಮಾಡಿದೆ ಎಂದಿದ್ದಾರೆ ರಚಿತಾ ರಾಮ್. ನನ್ನ ಸ್ನೇಹಿತರೆಲ್ಲರೂ ಕೊರಗಜ್ಜ ದೈವದ ಕಾರ್ಣಿಕದ ಬಗ್ಗೆ ಹೇಳಿದ್ದರು. ಹಾಗಾಗಿ ನನಗೂ ಇಲ್ಲಿಗೆ ಬರಬೇಕು ಅನ್ನಿಸಿತು, ಬಂದ್ಬಿಟ್ಟೆ. ಕೊರಗಜ್ಜನ ಕ್ಷೇತ್ರವು ಪ್ರಾಕೃತಿಕ ಸೌಂದರ್ಯವನ್ನೊಳಗೊಂಡಿದ್ದು, ತುಂಬಾ ಚೆನ್ನಾಗಿದೆ. ಮುಂದಿನ ಜೂನ್ ತಿಂಗಳಲ್ಲಿ ಮ್ಯಾಟ್ನಿ ಮತ್ತು ಬ್ಯಾಡ್ ಮ್ಯಾನರ್ಸ್ ಚಿತ್ರಗಳು ತೆರೆ ಕಾಣಲಿದೆ. ಆ ಚಿತ್ರಗಳು ಯಶಸ್ಸು ಕಾಣಲಿ ಎಂದು ಕೊರಗಜ್ಜನಲ್ಲಿ ಪ್ರಾರ್ಥಿಸಿದೆ' ಎಂದು ಹೇಳಿದ್ದಾರೆ.
ಎಲ್ಲವೂ ಕಾಂತಾರ ಮಹಿಮೆ. ಇದೇ ದೇವಸ್ಥಾನಕ್ಕೆ ಇತ್ತೀಚೆಗೆ ಶಿವಣ್ಣ-ಗೀತಾ ದಂಪತಿ ಭೇಟಿ ನೀಡಿದ್ದರು. ಚಿತ್ರರಂಗದ ಹಲವರು ಕೊರಗಜ್ಜನ ಪ್ರಾರ್ಥನೆ ಸಲ್ಲಿಸಿದ್ದಾರೆ. ಕಾಂತಾರದ ನಂತರ ಕರಾವಳಿ ದೈವಗಳ ಬಗ್ಗೆ ಜನರಲ್ಲಿ ಕುತೂಹಲ ಮತ್ತು ಭಕ್ತಿ ಎರಡೂ ಹೆಚ್ಚುತ್ತಿದೆ.