ಜೊತೆ ಜೊತೆಯಲಿ. ಸುಮಾರು 4 ವರ್ಷಗಳ ಹಿಂದೆ ಶುರುವಾದ ಧಾರಾವಾಹಿ ಕೊನೆಗೂ ಅಂತ್ಯಕಂಡಿದೆ. 951 ಎಪಿಸೋಡುಗಳ ಬಳಿಕ ಧಾರಾವಾಹಿ ಎಂಡ್ ಆಗಿದೆ. ಈ ಧಾರಾವಾಹಿಯ ವಿಶೇಷತೆಯೆಂದರೆ ಆರ್ಯವರ್ಧನ್ ಮತ್ತು ಅನು ಸಿರಿಮನೆ ಕ್ಯಾರೆಕ್ಟರ್ಗಳು ಸ್ಟಾರ್ ಆಗಿದ್ದು. ಅನಿರುದ್ಧ-ಮೇಘಾ ಶೆಟ್ಟಿ ಜೋಡಿ, ವಿಷ್ಣು-ಭಾರತಿ ಜೋಡಿಯಂತೆಯೇ ಫೇಮಸ್ ಆಗಿದ್ದು ಸುಳ್ಳಲ್ಲ. ಅನಿರುದ್ಧ ಅವರ ಸ್ಟೈಲ್ ನೋಡಿದ ಜನ, ವಿಷ್ಣು ಅವರನ್ನೇ ಕಂಡಂತೆ ಥ್ರಿಲ್ ಆದರು. ಅದರ ಲಾಭವಾಗಿದ್ದು ಜೊತೆ ಜೊತೆಯಲಿ ಸೀರಿಯಲ್ಲಿಗೆ. ಟಿಆರ್ಪಿಯಲ್ಲಿ ಸತತ ನಂ.1 ಪಟ್ಟ ಕಾಯ್ದುಕೊಂಡಿದ್ದ ಜೊತೆ ಜೊತೆಯಲಿ ಕನ್ನಡ ಸೀರಿಯಲ್ಲುಗಳ ಹಣೆ ಬರಹ ಬದಲಿಸಿದ್ದು ಸುಳ್ಳಲ್ಲ.
ಆದರೆ ಅದಾದ ಮೇಲೆ ಸೀರಿಯಲ್ಲಿನ ಕಲಾವಿದರು, ತಂತ್ರಜ್ಞರ ಮಧ್ಯೆ ಮನಸ್ತಾಪಗಳು ಬರುವುದಕ್ಕೆ ಶುರುವಾದವು. ಕೊನೆಗೆ ಅನಿರುದ್ಧ ಅವರನ್ನೇ ಸೀರಿಯಲ್ಲಿನಿಂದ ಹೊರಹಾಕಲಾಯಿತು. ಅನಿರುದ್ಧ ಜಾಗಕ್ಕೆ ಬೇರೆಯವರು ಬಂದರಾದರೂ ಕ್ಲಿಕ್ ಆಗಲಿಲ್ಲ. ನಿರ್ದೇಶಕ ಆರೂರು ಜಗದೀಶ್ ಇದೀಗ ಧಾರಾವಾಹಿಯನ್ನೇ ಕೊನೆಗೊಳಿಸಿದ್ದಾರೆ.
ಸೀರಿಯಲ್ ಮುಗಿದರೂ, ಧಾರಾವಾಹಿಯ ತಂಡದ ಸದಸ್ಯರ ಜೊತೆ ಈಗಲೂ ಅದೇ ಬಾಂಧವ್ಯ ಇಟ್ಟುಕೊಂಡಿರುವ ಅನಿರುದ್ಧ, ಇಡೀ ತಂಡಕ್ಕೆ ಶುಭ ಕೋರಿದ್ದಾರೆ. ಮೇಘಾ ಶೆಟ್ಟಿಯವರಂತೂ ಅನಿರುದ್ಧ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ ಎಂದಿದ್ದಾರಷ್ಟೇ ಅಲ್ಲ, ಇನ್ನು ಮುಂದೆ ಸಿನಿಮಾಗಳತ್ತ ಗಮನ ಹರಿಸುತ್ತೇನೆ. ಅನು ಸಿರಿಮನೆ ಪಾತ್ರದಿಂದ ಹೊರಬರಬೇಕಿದೆ ಎಂದಿದ್ದಾರೆ. ಆರೂರು ಜಗದೀಶ್ ಆಗಲೇ ಹೊಸ ಪ್ರಾಜೆಕ್ಟಿನಲ್ಲಿ ಬ್ಯುಸಿಯಾಗಿದ್ದಾರೆ.