ಕರ್ನಾಟಕದ ವಿಧಾನಸಭೆ ಚುನಾವಣೆ ರಂಗೇರುತ್ತಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ತಲಾ ಒಂದೊಂದು ಪಟ್ಟಿ ಅಭ್ಯರ್ಥಿಗಳನ್ನು ಅನೌನ್ಸ್ ಮಾಡಿದ್ದಾರೆ. ಈಗಾಗಲೇ ಗೆದ್ದಿರುವವರಿಗೆ ಟಿಕೆಟ್ ಫಿಕ್ಸ್ ಆಗಿದೆ. ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿದೆ. ಹಾಗೆಯೇ, ಹೊಸ ಹೊಸ ಮುಖಗಳು ಚುನಾವಣಾ ಅಖಾಡಕ್ಕೆ ಧುಮುಕುತ್ತಿವೆ. ಇದೀಗ ನಿರ್ಮಾಪಕ ಕೆ ಮಂಜು ಅವರು ಕೂಡ ಈ ಬಾರಿಯ ವಿಧಾನ ಸಭಾ ಚುನಾವಣೆಗೆ ಸ್ಪರ್ಧೆ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಆದರೆ ಯಾವ ಪಕ್ಷ.?
ನಮ್ಮ ನಾಯಕರ ಜೊತೆ ಮಾತುಕತೆ ಮಾಡುತ್ತಿದ್ದೇನೆ. ಒಂದೆರಡು ದಿನಗಳಲ್ಲಿ ಆ ಬಗ್ಗೆ ಅಧಿಕೃತ ಘೋಷಣೆ ಆಗಲಿದೆ. ಪದ್ಮನಾಭನಗರದಿಂದಲೇ ನಾನು ವಿಧಾನ ಸಭಾ ಚುನಾವಣೆಗೆ ನಿಲ್ಲುವುದು ಖಚಿತ. ಪದ್ಮನಾಭನಗರದಲ್ಲಿ ಸಾಕಷ್ಟು ಒಕ್ಕಲಿಗ ಮತಗಳಿವೆ. ಹಾಗೆಯೇ ಎಲ್ಲರೂ ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದು ನಾನು ನಂಬಿದ್ದೇನೆ ಎನ್ನುವ ಮಂಜು ಯಾವ ಪಕ್ಷದಿಂದ ಅಭ್ಯರ್ಥಿ ಎನ್ನುವುದನ್ನೇ ಗುಟ್ಟಾಗಿಟ್ಟಿರುವುದು ವಿಶೇಷ.
ಈಗ ಪದ್ಮನಾಭನಗರಕ್ಕೆ ಆರ್.ಅಶೋಕ್ ಎಂಎಲ್ಎ. ಸತತವಾಗಿ ಗೆಲ್ಲುತ್ತಿರುವ ಅಶೋಕ್, ಒಮ್ಮೆ ಡಿಸಿಎಂ ಕೂಡಾ ಆಗಿದ್ದರು. ಈಗಲೂ ಶಾಸಕರಾಗಿರುವ ಆರ್.ಅಶೋಕ್, ಪದ್ಮನಾಭನಗರದಲ್ಲಿ ಬಿಜೆಪಿ ಅಭ್ಯರ್ಥಿ ಎನ್ನುವುದರಲ್ಲಿ ಅನುಮಾನವಿಲ್ಲ. ಆರ್.ಅಶೋಕ್ ವಿರುದ್ಧ ಮಂಜು ಯಾವ ಪಾರ್ಟಿಯಿಂದ ಕಣಕ್ಕಿಳಿಯುತ್ತಾರೆ ಎನ್ನುವುದೇ ನಿಗೂಢ.