ಅಹಿಂಸಾ ಚೇತನ್ ಸದಾ ಸುದ್ದಿಯಲ್ಲಿರುತ್ತಾರೆ. ಯಾರಾದರೊಬ್ಬರನ್ನು ಟೀಕಿಸುತ್ತಲೇ ಸುದ್ದಿಯಲ್ಲಿರುವ ನಟ ಚೇತನ್ ಇತ್ತೀಚೆಗೆ ಹಿಂದೂ ಧರ್ಮವನ್ನು ಸುಳ್ಳುಗಳ ಮೇಲೆ ಕಟ್ಟಿದ ಧರ್ಮ ಎಂದು ಜೈಲಿಗೂ ಹೋಗಿ ಬಂದಿದ್ದರು. ಆನಿವಾಸಿ ಭಾರತೀಯರಾಗಿರುವ, ಭಾರತೀಯ ಪೌರರಲ್ಲದ ಚೇತನ್, ಈ ಕಾರಣಕ್ಕಾಗಿಯೇ ಕಾನೂನು ಸಮರ ಎದುರಿಸುತ್ತಿದ್ದಾರೆ. ಭಾರತೀಯ ಪೌರತ್ವ ಹೊಂದಿಲ್ಲದವರು ಎಲ್ಲ ವಿಷಯಗಳ ಬಗ್ಗೆಯೂ ಮಾತನಾಡುವ ಹಾಗಿಲ್ಲ. ಕೆಲವು ನಿರ್ಬಂಧಗಳಿರುತ್ತವೆ. ಹೀಗಾಗಿಯೇ ಹಿಂದೊಮ್ಮೆ ಜೈಲು ಪಾಲಾಗಿದ್ದ ಚೇತನ್, ಇತ್ತೀಚೆಗೆ ಮತ್ತೊಮ್ಮೆ ಜೈಲಿಗೆ ಹೋಗಿ ಬಂದಿದ್ದರು. ಆದರೆ ಚೇತನ್ ಅವುಗಳ ಜೊತೆ ಹೋರಾಡುತ್ತಲೇ ತಮಗೆ ಅನ್ನಿಸಿದ್ದನ್ನು ಹೇಳುತ್ತಲೇ ಇದ್ದಾರೆ. ಈ ಬಾರಿ ಅವರು ಸುಮಲತಾ ಅಂಬರೀಷ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ.
ಅಂಬರೀಶ್ ಸ್ಮಾರಕದ ಬಗ್ಗೆ ಹಾಗೂ ಅದಕ್ಕೆ ಖರ್ಚಾಗಿರುವ ಸರ್ಕಾರಿ ಹಣದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಚೇತನ್ ಅಹಿಂಸ, ಅನಗತ್ಯವಾಗಿದ್ದ ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಸುಮಲತಾರವರು ಅಂದಾಜು ಎರಡು ಎಕರೆ ಜಾಗ ಮತ್ತು 12 ಕೋಟಿ ರೂಪಾಯಿ ಹಣವನ್ನು ಸರ್ಕಾರದಿಂದ ‘ಕೈ ಚಾಚಿ’ ಪಡೆದಿರುವುದು ವಿಪರ್ಯಾಸವಾಗಿದೆ. ತೆರಿಗೆದಾರರ ಹಣವನ್ನು ಹೀಗೆ ದುರುಪಯೋಗಪಡಿಸಿಕೊಳ್ಳುವ ಬದಲು ಸುಮಲತಾರವರು ತಮ್ಮ ಸ್ವಂತದ 23.4 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲು ಸಾಧ್ಯವಾಗಲಿಲ್ಲವೇ? ಎಲ್ಲಾ ಉಳ್ಳವರಿಗೆ ಮತ್ತೆ ಸವಲತ್ತು ಒದಗಿಸುವುದು ನ್ಯಾಯವೇ? ಎಂದು ಪ್ರಶ್ನೆ ಮಾಡಿದ್ದಾರೆ.
ಅಂಬರೀಶ್ ಅವರ ಸ್ಮಾರಕವನ್ನು ಸರ್ಕಾರವು ಕಂಠೀರವ ಸ್ಟುಡಿಯೋನಲ್ಲಿ ನಿರ್ಮಾಣ ಮಾಡಿದೆ. ಒಂದು ಎಕರೆ 34 ಗುಂಟೆ ಪ್ರದೇಶದಲ್ಲಿ ಭವ್ಯವಾಗಿ ಸ್ಮಾರಕ ನಿರ್ಮಾಣವಾಗಿದ್ದು ಇದಕ್ಕೆ ಸುಮಾರು 12 ಕೋಟಿಗೂ ಹೆಚ್ಚಿನ ಮೊತ್ತ ಖರ್ಚಾಗಿದೆ. ಅಂಬರೀಷ್ ಯಾರ ಬಳಿಯೂ ಕೈಚಾಚಿಲ್ಲ ಎಂದಿದ್ದ ಸುಮಲತಾ ಅವರ ಹೇಳಿಕೆಯನ್ನೇ ಇಟ್ಟುಕೊಂಡು ಚೇತನ್ ಅಹಿಂಸಾ ಸುಮಲತಾ ಅವರನ್ನು ಟೀಕೆ ಮಾಡಿದ್ದಾರೆ.