ಕಾಂತಾರ ರಿಷಬ್ ಶೆಟ್ಟಿ.. ಶಶಾಂಕ್.. ತರುಣ್ ಸುಧೀರ್.. ತೆಲುಗಿನ ಅನಿಲ್ ರವಿಪುಡಿ..777 ಚಾರ್ಲಿ ಖ್ಯಾತಿಯ ಕಿರಣ್ ರಾಜ್, ಬಹದ್ದೂರ್ ಚೇತನ್ ಕುಮಾರ್..
ಹೀಗೆ ಪೆಂಟಗನ್ ಚಿತ್ರದ ಟ್ರೇಲರ್ ಮೆಚ್ಚಿಕೊಂಡ ಚಿತ್ರರಂಗದ ತಾರೆಯರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಐದು ಜನ ನಿರ್ದೇಶಕರು, ಐದು ಕಥೆಗಳು, ಐದು ಜನ ಬರಹಗಾರರು, ಐದು ಹೀರೋಗಳು ಹೀಗೆ ಐದೈದು ವಿಷಯಗಳನ್ನು ಪೆಂಟಗನ್ ಚಿತ್ರದಲ್ಲಿ ಹೇಳಲು ಹೊರಟಿದೆ ಚಿತ್ರತಂಡ. ಎಲ್ಲ ವಯಸ್ಸಿನವರಿಗೂ ಇಷ್ಟವಾಗುವಂತಹ ಕಥೆಗಳನ್ನು ಒಳಗೊಂಡಿರುವ ಸಿನಿಮಾ ಇದಾಗಿದ್ದು, ಚಿತ್ರದಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡಲಾಗಿದೆ ಎಂದಿದ್ದಾರೆ ಗುರು ದೇಶಪಾಂಡೆ.
ಇದು ಕನ್ನಡದ ಮತ್ತೊಂದು ಕಥಾಸಂಗಮ. ಪುಟ್ಟಣ ಕಣಗಾಲ್ ಅವರ ಲೆಗೆಸಿ ಮುಂದುವರಿಯುತ್ತಿರುವುದನ್ನು ನೋಡಲು ಖುಷಿ ಆಗುತ್ತದೆ. ಟ್ರೇಲರ್ ತುಂಬ ಆಕರ್ಷಕವಾಗಿದೆ. ಪೆಂಟಗನ್ ತಂಡಕ್ಕೆ ಆಲ್ ದಿ ಬೆಸ್ಟ್ ಎಂದು ರಿಷಬ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ.
ಕನ್ನಡದ ಪೆಂಟಗನ್ ಸಿನಿಮಾದ ಟ್ರೇಲರ್ ಹಂಚಿಕೊಳ್ಳಲು ನನಗೆ ಖುಷಿ ಆಗುತ್ತಿದೆ. ಇದೊಂದು ಅದ್ಭುತ ಟ್ರೇಲರ್. ಇಡೀ ತಂಡಕ್ಕೆ ಶುಭವಾಗಲಿ’ ಎಂದು ಅನಿಲ್ ರವಿಪುಡಿ ಟ್ವೀಟ್ ಮಾಡಿದ್ದಾರೆ.
ರಾಘು ಶಿವಮೊಗ್ಗ, ಆಕಾಶ್ ಶ್ರೀವತ್ಸ, ಚಂದ್ರ ಮೋಹನ್, ಕಿರಣ್ ಕುಮಾರ್ ಹಾಗೂ ಮತ್ತೊಂದು ಕಥೆಗೆ ಗುರು ದೇಶಪಾಂಡೆ ಅವರೇ ನಿರ್ದೇಶನ ಮಾಡಿದ್ದಾರೆ. ಪ್ರಕಾಶ್ ಬೆಳವಾಡಿ, ಕಿಶೋರ್, ವಿಶಂಕರ್ ಸೇರಿದಂತೆ ಹೆಸರಾಂತ ನಟರೇ ತಾರಾ ಬಳಗದಲ್ಲಿ ಇದ್ದಾರೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಹಾಡುಗಳು ಜನರ ಗಮನ ಸೆಳೆದಿವೆ.
ಇದು ಪ್ರಯೋಗಾತ್ಮಕ ಸಿನಿಮಾವಲ್ಲ, ಪಕ್ಕಾ ಕಮರ್ಷಿಯಲ್ ಚಿತ್ರ. ನೋಡುಗನಿಗೆ ಏನೆಲ್ಲ ಬೇಕಿದೆಯೋ ಎಲ್ಲವನ್ನೂ ಈ ಸಿನಿಮಾದಲ್ಲಿ ತೋರಿಸುವ ಪ್ರಯತ್ನ ಮಾಡಿದ್ದೇವೆ. ಹೊಸ ಆಲೋಚನೆಯ ನಿರ್ದೇಶಕರು, ಬರಹಗಾರರು ಮತ್ತು ಹೊಸ ಕಲಾವಿದರು ಕೂಡ ಸಿನಿಮಾದ ಭಾಗವಾಗಿದ್ದಾರೆ. ಹಾಗಾಗಿ ಪ್ರೇಕ್ಷಕರಿಗೆ ಈ ಸಿನಿಮಾ ಹೊಸ ಅನುಭವನ್ನು ನೀಡಲಿದೆ ಎನ್ನುತ್ತಾರೆ ಗುರು ದೇಶಪಾಂಡೆ. ಏಪ್ರಿಲ್ 7ರಂದು ‘ಪೆಂಟಗನ್’ ಸಿನಿಮಾ ಬಿಡುಗಡೆ ಆಗಲಿದೆ.