ಶಿವಣ್ಣ ಅಷ್ಟೇ ಅಲ್ಲ, ರಮೇಶ್ ಅರವಿಂದ್ ಕೂಡಾ 100+ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದೀಗ ಮತ್ತೊಂದು ಸೆಂಚುರಿ ಹೊಡೆಯುವ ಹಾದಿಯಲ್ಲಿದ್ದಾರೆ. ಅದು ವೀಕೆಂಡ್ ವಿತ್ ರಮೇಶ್ ಸರಣಿಯಲ್ಲಿ. ಹೊಸ ಸೀಸನ್ ಪ್ರಾರಂಭವಾಗಲಿದೆ. ಮೊದಲ ಸಂಚಿಕೆ ಮಾರ್ಚ್ 25 ರಂದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. 5ನೇ ಸೀಸನ್ ಪ್ರಾರಂಭಕ್ಕೂ ಮುನ್ನ ನಿರೂಪಕ ರಮೇಶ್ ಅರವಿಂದ್ ಹಾಗೂ ಜೀ ವಾಹಿನಿಯ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರು ಪತ್ರಿಕಾಗೋಷ್ಠಿಯಲ್ಲಿ ಶೋ ಕುರಿತಾಗಿ ಮಾಹಿತಿ ನೀಡಿದ್ದಾರೆ. ಮೊದಲ ಎಪಿಸೋಡ್ನ ಅತಿಥಿ ಯಾರಾಗಲಿದ್ದಾರೆ ಎಂಬುದರ ಜೊತೆಗೆ ಈ ಸೀಸನ್ನಲ್ಲಿ ಕಾಣಿಸಿಕೊಳ್ಳುವ ಇತರೆ ಕೆಲವು ಅತಿಥಿಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ.
ಮೊದಲ ಎಪಿಸೋಡ್ಗೆ ಸ್ಯಾಂಡಲ್ವುಡ್ ಕ್ವೀನ್ ನಟಿ ರಮ್ಯಾ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ರಮ್ಯಾ ಜೊತೆಗಿನ ಎಪಿಸೋಡ್ನ ಚಿತ್ರೀಕರಣ ಮಾರ್ಚ್ 21 ರಿಂದ ಪ್ರಾರಂಭವಾಗಲಿದೆ. ಎರಡನೇ ಎಪಿಸೋಡ್ ನಲ್ಲಿ ಡ್ಯಾನ್ಸ್ ಲಿಜೆಂಡ್ ಪ್ರಭುದೇವ ಸಾಧಕರ ಕುರ್ಚಿಯ ಮೇಲೆ ಕೂರಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಸೀಸನ್ನಲ್ಲಿ ನಟ ಧ್ರುವ ಸರ್ಜಾ, ನಟಿ ರಚಿತಾ ರಾಮ್, ನಟಿ ಮಾಲಾಶ್ರೀ, ಇಶಾ ಫೌಂಡೇಶನ್ನ ಜಗ್ಗಿ ವಾಸುದೇವ್ , ಖ್ಯಾತ ಹೃದ್ರೋಗ ತಜ್ಞ ಮಂಜುನಾಥ್ ಸೇರಿದಂತೆ ಇನ್ನೂ ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಶೇಷವೆಂದರೆ ಇನ್ನು 16 ಸಾಧಕರ ಬಳಿಕ ನೂರನೇ ಸಾಧಕರು ಬರಲಿದ್ದು, ಆ ಎಪಿಸೋಡ್ಗೆ ಬಹಳ ವಿಶೇಷ ಅತಿಥಿಯೊಬ್ಬರು ಸಾಧಕರ ಕುರ್ಚಿ ಏರಲಿದ್ದಾರೆ. ನೂರನೇ ಎಪಿಸೋಡ್ಗೆ ಬರುವ ಅತಿಥಿ ಆ ಚೇರ್ಗೆ ನ್ಯಾಯ ಕೊಡಲಿದ್ದಾರೆ ಎಂದಿದ್ದಾರೆ ನಟ ರಮೇಶ್.
ಸಿನಿಮಾದಲ್ಲಿಯೂ ಸೆಂಚುರಿ ಹೋಡಿದಿದ್ದೇನೆ. ಈಗ ಇದರಲ್ಲೂ ಸೆಂಚುರಿ ಬಾರಿಸಿದರೆ ಖುಷಿ ಆಗುತ್ತ್ತದೆ. ಕರ್ನಾಟಕದಲ್ಲಿ ಸಾಧಕರಿಗೆ ಕೊರತೆ ಇಲ್ಲ. ಕೇವಲ ನಟ, ರಾಜಕಾರಣಿ ಅಲ್ಲ ವೈದ್ಯರು, ರೈತರು, ನರ್ಸ್, ಹೀಗೆ ಹಲವರನ್ನು ಕರೆಸಬಹುದು. ಸ್ಪೂರ್ತಿ ತುಂಬುವ ಕೆಲಸ ಮಾಡಬೇಕು. ಕರ್ನಾಟಕದಲ್ಲಿರೋ ಎಲ್ಲರಿಗೂ ತಮ್ಮ ನಿಜವಾದ ಶಕ್ತಿಯ ಅರಿವಾಗಿ, ಎಲ್ಲರೂ ತಮ್ಮ ಅತ್ಯುತ್ತಮ ವ್ಯಕ್ತಿತ್ವನ್ನು ಹೊರಗೆ ತೋರಬೇಕು ಅನ್ನುವುದೇ ವೀಕೆಂಡ್ ವಿತ್ ರಮೇಶ್ ಅನ್ನೋದೆ ಉದ್ದೇಶ ಎಂದರು ರಮೇಶ್ ಅರವಿಂದ್. ಇದೇ ಮಾರ್ಚ್ 25 ರಿಂದ ಸೀಸನ್ 5 ಪ್ರಸಾರವಾಗಲಿದೆ.