ದೊರೈ-ಭಗವಾನ್ ಜೋಡಿ ಎಂದೇ ಖ್ಯಾತರಾಗಿದ್ದ ಜೋಡಿಯ ನಿರ್ದೇಶಕ ಭಗವಾನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶ್ರೀನಿವಾಸ ಕೃಷ್ಣ ಅಯ್ಯಂಗಾರ್ ಭಗವಾನ್ ಇವರ ಪೂರ್ತಿ ಹೆಸರು. ನಟರಾಗಿ, ನಿರ್ದೇಶಕರಾಗಿ ನಿರ್ಮಾಪಕರಾಗಿ ಗುರಿತಿಸಿಕೊಂಡಿದ್ದ ಭಗವಾನ್ ಅವರಿಗೆ 89 ವರ್ಷ. ವಯೋಸಹಜ ಕಾಯಿಲೆ, ಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಭಗವಾನ್ ಅವರನ್ನು ಬೆಂಗಳೂರಿನ ಜಯದೇವ ಆಸ್ಪತ್ರೆಗೆ ದಾಖಲಿಸಿದ್ದಾರೆ. ಡಾ.ಮಂಜುನಾಥ್ ಅವರು ಭಗವಾನ್ಗೆ ಚಿಕಿತ್ಸೆ ನೀಡುತ್ತಿದ್ದಾರೆ.
1966ರಲ್ಲಿ ʻಸಂಧ್ಯಾರಾಗʼ ಸಿನಿಮಾ ಮೂಲಕ ಸಹಾಯಕ ನಿರ್ದೇಶಕರಾಗಿ ಭಗವಾನ್ ಚಿತ್ರರಂಗ ಪ್ರವೇಶಿಸಿದ್ದರು. ಬಳಿಕ ದೊರೈರಾಜ್ ಅವರ ಜೊತೆಗೂಡಿ ಸಾಕಷ್ಟು ಸಿನಿಮಾಗಳನ್ನ ನಿರ್ದೇಶನ ಮಾಡಿದ್ದರು.
ಕನ್ನಡಕ್ಕೆ ಬಾಂಡ್ ಚಿತ್ರಗಳನ್ನು ಪರಿಚಯಿಸಿದ ಖ್ಯಾತಿ ದೊರೈ-ಭಗವಾನ್ ಜೋಡಿಯದ್ದು. ಜೇಡರಬಲೆ ಇವರ ಮೊದಲ ಸಿನಿಮಾ. ಕಸ್ತೂರಿ ನಿವಾಸ, ಎರಡು ಕನಸು, ಬಯಲುದಾರಿ, ಚಂದನದ ಗೊಂಬೆ, ಬೆಂಕಿಯ ಬಲೆ, ಹೊಸ ಬೆಳಕು, ಜೀವನ ಚೈತ್ರ,.. ಹೀಗೆ ಡಾ.ರಾಜ್, ವಿಷ್ಣುವರ್ಧನ್, ಅನಂತನಾಗ್.. ರಂತಹ ದಿಗ್ಗಜರ ಚಿತ್ರಗಳನ್ನು ಡೈರೆಕ್ಟ್ ಮಾಡಿದವರು. ಅನಂತನಾಗ್-ಲಕ್ಷ್ಮೀ ಜೋಡಿಯನ್ನು ಯಶಸ್ವಿ ಜೋಡಿಯನ್ನಾಗಿಸಿದ ಕೀರ್ತಿಯೂ ಇವರದ್ದೇ. 2019ರಲ್ಲಿ ರಿಲೀಸ್ ಆದ ಆಡುವ ಬೊಂಬೆ ಇವರ ನಿರ್ದೇಶನದ 50ನೇ ಸಿನಿಮಾ. ಹೆಚ್ಚೂ ಕಡಿಮೆ 25 ವರ್ಷಗಳ ನಂತರ ನಿರ್ದೇಶನಕಕ್ಕಿಳಿದಿದ್ದ ಭಗವಾನ್ ಅವರು ಕನ್ನಡ ಚಿತ್ರರಂಗದ ವಿಶ್ವಕೋಶ ಎಂದೇ ಹೆಸರಾದವರು. ಭಗವಾನ್ ಶೀಘ್ರ ಚೇತರಿಸಿಕೊಳ್ಳಲಿ.