ರಚನಾ ಇಂದರ್. ಸದ್ಯಕ್ಕೆ ಸ್ಯಾಂಡಲ್ವುಡ್ ಸೆನ್ಸೇಷನ್. ಮುಗ್ಧತೆಯನ್ನೇ ಎರಕ ಹೊಯ್ದಂತಿರುವ ರಚನಾ ಇಂದರ್, ತಮ್ಮ ತ್ರಿಬ್ಬಲ್ ರೈಡಿಂಗ್ ಚಿತ್ರದ ಬಿಡುಗಡೆ ಸಂಭ್ರಮದಲ್ಲಿರುವಾಗಲೇ ಮತ್ತೊಂದು ಹೊಸ ಚಿತ್ರ ಒಪ್ಪಿಕೊಂಡಿದ್ದಾರೆ. ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ.ರವಿಕುಮಾರ್ ಹಾಗೂ ಶಮ್ಶುದ್ದೀನ್ ಎ ನಿರ್ಮಿಸಿರುವ ನಾಟ್ ಔಟ್ ಚಿತ್ರಕ್ಕೆ ರಚನಾ ಇಂದರ್ ನಾಯಕಿಯಾದರೆ, ನಿರ್ಮಾಪಕ ರವಿ ಕುಮಾರ್ ಪುತ್ರ ಅಜಯ್ ಪೃಥ್ವಿ ಹೀರೋ. ನಿರ್ದೇಶಕ ಅಂಬರೀಷ್.
ನಾಟ್ ಔಟ್' ಎಂದರೆ ಕಣ್ಣಿಗೆ ಕಾಣದೆ ಇರುವ ವ್ಯಕ್ತಿ ಕೊಡು ತೀರ್ಪು. ಪ್ರತಿ ಆಟದಲ್ಲಿ ಒಬ್ಬ ಅಂಪೈರ್ ಇರ್ತಾನೆ. ಜೀವನದ ಆಟಕ್ಕೂ ಒಬ್ಬ ಅಂಪೈರ್ ಇರ್ತಾನೆ. ಈ ಚಿತ್ರದಲ್ಲಿ ಹಳ್ಳಿ ಸೊಗಡಿನ ಹುಲಿ - ಕುರಿ ಆಟವನ್ನ ಹೇಗೆ ಆಡುತ್ತಾರೋ, ಅದೇ ರೀತಿ ಚಿತ್ರದ ಕಥೆ ಸಾಗುತ್ತೆ. ಆಟದಲ್ಲಿ ಬೆಟ್ಟದ ತುದಿಯಲ್ಲಿರುವ ಹುಲಿಗಳು ಮತ್ತು ಬೆಟ್ಟದ ತಳದಲ್ಲಿರುವ ಕುರಿಗಳು ಬೆಟ್ಟವನ್ನು ಹತ್ತುವಾಗ ಹುಲಿಗಳಿಂದ ತಪ್ಪಿಸಿಕೊಳ್ಳುವುದಕ್ಕೆ ಮಾಡುವ ಪ್ರಯತ್ನಗಳು ಆಟದಲ್ಲಿ ಇದ್ದಂತೆ ಚಿತ್ರಕಥೆ ಮತ್ತು ಸಂಭಾಷಣೆಯಲ್ಲಿರುತ್ತವೆ ಎಂದಿದ್ದಾರೆ ಅಂಬರೀಶ್.
ಚಿತ್ರದ ಹೀರೋ ತಾವು ಏಕಾಏಕಿ ಚಿತ್ರರಂಗಕ್ಕೆ ಬಂದಿಲ್ಲ. ಮೆಹಬೂತ ಸೇರಿದಂತೆ ಕೆಲವು ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರಗಳಲ್ಲಿ ನಟಿಸಿದ್ದೇನೆ. ಬಿಂಬ ಸೇರಿದಂತೆ ಹಲವು ಕಡೆ ತರಬೇತಿ ಪಡೆದಿದ್ದೇನೆ. ಪಾತ್ರ ಮತ್ತು ಕಥೆ ಎರಡೂ ಚೆನ್ನಾಗಿದೆ ಎಂದು ಅಜಯ್ ಪೃಥ್ವಿ ಹೇಳಿದರೆ ರಚನಾ ಇಂದರ್ ಈ ಚಿತ್ರದಲ್ಲಿ ನರ್ಸ್ ಪಾತ್ರದಲಿ ್ಲನಟಿಸುತ್ತಿದ್ದಾರಂತೆ.