ಶಾಲಾ ಪಠ್ಯ ವಿವಾದ ಯಾರನ್ನೂ ಬಿಡುತ್ತಿಲ್ಲ. ಜಾತಿ, ಮತ, ಧರ್ಮ, ಪಂಥ.. ಎಲ್ಲವನ್ನೂ ಮೀರಿದ್ದ ನಟ ಡಾ.ರಾಜ್ ಕುಮಾರ್ ಅವರಿಗೂ ಇದರ ಬಿಸಿ ತಟ್ಟಿದೆ. ಪ್ರಸಕ್ತ ವರ್ಷದ ಪಠ್ಯ ಪುಸ್ತಕ ಪರಿಷ್ಕೃತ ಕ್ರಮದಲ್ಲಿ ೭ ಸಾಹಿತಿಗಳ ಕೃತಿಯನ್ನು ವಾಪಸ್ ಪಡೆಯುವಂತೆ ಸರ್ಕಾರ ಸೂಚಿಸಿದೆ. ಅದರಲ್ಲಿ ಡಾ.ರಾಜ್ ಕುಮಾರ್ ಪಠ್ಯವೂ ಸೇರಿರುವುದು ವಿಶೇಷ.
ದೇವನೂರು ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ, ಡಾ.ಜಿ.ರಾಮಕೃಷ್ಣ ಅವರ ಭಗತ್ ಸಿಂಗ್, ರೂಪಾ ಹಾಸನ ಅವರ ಅಮ್ಮನಾಗುವುದೆಂದರೆ, ಈರಪ್ಪ ಎಂ.ಕAಬಳಿ ಅವರ ಹೀಗೊಂದು ಟಾಪ್ ಪ್ರಯಾಣ, ಸತೀಶ್ ಕುಲಕರ್ಣಿ ಅವರ ಕಟ್ಟತೇವು ನಾವು, ಸುಕನ್ಯಾ ಮಾರುತಿ ಅವರ ಏಣಿ ಹಾಗೂ ಎಂ.ರುಕ್ಕೋಜಿ ರಾವ್ ಅವರು ಬರೆದಿದ್ದ ಡಾ.ರಾಜ್ ಕುಮಾರ್ ಗದ್ಯವನ್ನು ವಾಪಸ್ ಪಡೆಯಲಾಗಿದೆ.
೬ನೇ ತರಗತಿ ಪ್ರಥಮ ಭಾಷೆ ಕನ್ನಡದಲ್ಲಿ ಡಾ.ರಾಜಕುಮಾರ್ ಅವರ ಗದ್ಯವನ್ನು ಸೇರಿಸಲಾಗಿತ್ತು. ರಾಜ್ಯ ಬಿಜೆಪಿ ಸರ್ಕಾರ ಪಠ್ಯ ಪುಸ್ತಕಗಳನ್ನು ಕೋಮುವಾದೀಕರಣ ಮಾಡುತ್ತಿದೆ ಎಂದು ಆರೋಪಿಸಿ ಹಲವು ಸಾಹಿತಿಗಳು ಪಠ್ಯವನ್ನು ವಾಪಸ್ ಪಡೆದಿದ್ದರು. ಅವರಲ್ಲಿ ರುಕ್ಕೋಜಿ ರಾವ್ ಕೂಡಾ ಸೇರಿದ್ದು, ಇದರಿಂದಾಗಿ ಡಾ.ರಾಜ ಕುಮಾರ್ ಪಠ್ಯವನ್ನು ಕೈಬಿಡಬೇಕಾದ ಪರಿಸ್ಥಿತಿ ಬಂದಿದೆ.
ಸಾಮಾನ್ಯವಾಗಿ ಮೊದಲು ಅನುಮತಿ ನೀಡಲಾಗಿರುತ್ತದೆ. ಏಕೆಂದರೆ ಅನುಮತಿಯಿಲ್ಲದೆ ಪಠ್ಯ ಪುಸ್ತಕ ಮುದ್ರಿಸಲು ಬರುವುದಿಲ್ಲ. ಆದರೆ ವಿವಾದದ ಹಿನ್ನೆಲೆಯಲ್ಲಿ ಪುಸ್ತಕ ಮುದ್ರಣವಾದ ನಂತರ ಅನುಮತಿ ವಾಪಸ್ ಪಡೆದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ ಈ ಶೈಕ್ಷಣಿಕ ವರ್ಷದ ಪಠ್ಯ ಪರೀಕ್ಷೆಯಲ್ಲಿ ಈ ಕೃತಿಗಳಿಗೆ ಸಂಬAಧಿಸಿದ ಪ್ರಶ್ನೆಗಳೂ ಇರುವುದಿಲ್ಲ. ಶಿಕ್ಷಕರು ಪಾಠವನ್ನೂ ಮಾಡುವುದಿಲ್ಲ. ಮುಂದಿನ ವರ್ಷದಿಂದ ಪಠ್ಯ ಪುಸ್ತಕದಲ್ಲಿ ಮುದ್ರಣವೂ ಆಗುವುದಿಲ್ಲ.