ಇದು ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರದ ಬಳಿ ಇರೋ ಚಂಪಕ ಸರಸು ಪುಷ್ಕರಣಿ. ಈ ಕಲ್ಯಾಣಿಯನ್ನು ಕೆಳದಿ ಅರಸರ ಕಾಲದಲ್ಲಿ ಕಟ್ಟಲಾಗಿತ್ತು. ಆದರೆ, ಸರಿಯಾಗಿ ನಿಗಾವಹಿಸದ ಕಾರಣ ಕಲ್ಯಾಣಿಯ ಗೋಡೆಗಳು ಬಿದ್ದು ಹೋಗಿ, ಕಲ್ಲುಗಳು ಹಾಳಾಗಿತ್ತು. ಸುಣ್ಣದ ಗಾರೆ ಕಿತ್ತು ಹೋಗಿ, ಕಲ್ಯಾಣಿಯ ಗೋಡೆಗಳ ಮಧ್ಯೆ ಮರಗಳ ಬೇರು, ರೆಂಬೆಕೊಂಬೆಗಳು ಬೆಳೆದಿದ್ದವು. ಆ ಕಲ್ಯಾಣಿಗೀಗ ಮರುಜೀವ ನೀಡಲಾಗಿದೆ.
ಇದು ಗೊತ್ತಾಗಿದ್ದು ಪರಿಸರ ಪ್ರೇಮಿ ಶಿವಾನಂದ ಕಳವೆ ಅವರಿಂದ. ಪರಿಸರ ಪ್ರೇಮಿ ಕಳವೆ, ಜಲತಜ್ಞರೆಂದೇ ಹೆಸರಾದವರು. ಹಲವು ಕೆರೆ, ಕಲ್ಯಾಣಿಗಳ ಪುನಃಶ್ಚೇತನದ ಬಗ್ಗೆ ವೈಜ್ಞಾನಿಕವಾಗಿ ಬಲ್ಲವರು. ಗ್ರಾಮೀಣ ಪ್ರದೇಶಗಳಲ್ಲಿ ಜನಪೂರಣದ ಬಗ್ಗೆಯೇ ಕೆಲಸ ಮಾಡುತ್ತಿರುವ ಅವರು ಈ ಕಲ್ಯಾಣಿಯ ವಿಷಯವನ್ನು ನಟ ಯಶ್ ಅವರ ಗಮನಕ್ಕೆ ತಂದರು. ಯಶೋಮಾರ್ಗದ ಮೂಲಕ ಕೆಲಸ ಶುರುವಾಯಿತು.
ಈ ಕಲ್ಯಾಣಿಗೆ ಪುರಾತನ ಮಾದರಿಯನ್ನೇ ಬಳಸಲಾಗಿದೆ. ಅಂದರೆ ಕಾಂಕ್ರೀಟ್ ಮತ್ತು ಸಿಮೆಂಟ್ ಬಳಸಿಲ್ಲ. ಸುಮಾರು 60ರಿಂದ 100 ಕೆಜಿ ತೂಕದ ಕಲ್ಲುಗಳನ್ನು ಬಳಸಿ, ಹಿಂದೆ ಯಾವ ರೀತಿ ಕಟ್ಟಲಾಗಿತ್ತೋ.. ಅದೇ ಮಾದರಿಯಲ್ಲಿ ಕಟ್ಟಲಾಗಿದೆ. ಮಣ್ಣನ್ನು ಕಲೆಸಿ ಮೂರ್ನಾಲ್ಕು ದಿನ ಬಿಟ್ಟು, ಆ ಕೆಸರಿನ ಮಣ್ಣು ಅಂಟಂಟು ಆಗಲು ಬಿಟ್ಟು, ಆ ಅಂಟಂಟು ಕೆಸರಿನ ಮಣ್ಣಿನಿಂದ ಕಟ್ಟಲಾಗಿದೆ. ಕಾಂಕ್ರೀಟ್ ಬಳಸಿ ಮಾಡಿದರೆ ಖರ್ಚು ಕಡಿಮೆ. ಮಣ್ಣಿನ ಕೆಲಸಕ್ಕೇ ಖರ್ಚು ಜಾಸ್ತಿ. ಆದರೂ ಕಳವೆ ಅವರು ಹೇಳಿದ ಆ ಮಾರ್ಗವನ್ನೇ ಬಳಸಿ ಕಲ್ಯಾಣಿ ಪುನಶ್ಚೇತನಗೊಳಿಸಿದೆ ಯಶ್ ಅವರ ಯಶೋಮಾರ್ಗ. ಸುಮಾರು ಒಂದೂವರೆ ತಿಂಗಳಿಂದ ಈ ಕೆಲಸ ನಡೆಯುತ್ತಿದ್ದು, ಕಾಮಗಾರಿ ಮುಕ್ತಾಯದ ಹಂತದಲ್ಲಿದೆಯಂತೆ.