ಕೇರಳ, ಆಂಧ್ರ ಪ್ರದೇಶ, ತೆಲಂಗಾಣದಲ್ಲಿ ಈಗಾಗಲೇ ಚಿತ್ರಮಂದಿರಗಳ ರೀ-ಓಪನ್ಗೆ ಅವಕಾಶ ಸಿಕ್ಕಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಇಲ್ಲ. ಅನ್ಲಾಕ್ 3.0ನಲ್ಲೂ ಅನುಮತಿ ಸಿಗಲಿಲ್ಲ. ಈಗ ಕೊರೊನಾದಿಂದಾಗಿ ಬಾಗಿಲು ಮುಚ್ಚಿರುವುದು ಥಿಯೇಟರ್`ಗಳು ಮಾತ್ರ.
ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನೀಡಿ ಎಂದು ಕರ್ನಾಟಕ ಫಿಲ್ಮ್ ಚೇಂಬರ್ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ಜುಲೈ ತಿಂಗಳ ಕಾರ್ಯಕಾರಿಣಿ ಸಭೆಯಲ್ಲಿ ಈ ಕುರಿತು ಚೇಂಬರ್ ನಿರ್ಣಯ ತೆಗೆದುಕೊಂಡಿದೆ.
ರಾಜ್ಯ ಸರ್ಕಾರ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಕೊಡಬೇಕು. ಚಿತ್ರಮಂದಿರಗಳ ಕರೆಂಟ್ ಬಿಲ್ ಮತ್ತು ಟ್ಯಾಕ್ಸ್ ಮನ್ನಾ ಮಾಡಬೇಕು ಎನ್ನುವ ಬೇಡಿಕೆಯನ್ನು ಪ್ರದರ್ಶಕರ ವಲಯ ಮುಂದಿಟ್ಟಿದೆ. ಪ್ರದರ್ಶಕರ ಬೇಡಿಕೆ ನ್ಯಾಯಯುತವಾಗಿದ್ದರೂ, ನ್ಯಾಯಯುತ ಬೇಡಿಕೆಗಳನ್ನು ತಿರುಗಿಯೂ ನೋಡದ ಸರ್ಕಾರ ಇದರತ್ತಲೂ ಗಮನ ಹರಿಸುವ ಸಾಧ್ಯತೆ ಇಲ್ಲ. ಹೀಗಾಗಿಯೇ ಕೊರೊನಾ ಮೊದಲನೇ ಅಲೆ ಮುಗಿದಾಗ 150ಕ್ಕೂ ಹೆಚ್ಚು ಚಿತ್ರಮಂದಿರಗಳು ಓಪನ್ ಆಗಲೇ ಇಲ್ಲ. 2ನೇ ಅಲೆ ಮುಗಿದಾಗ ಅದೆಷ್ಟು ಟಾಕೀಸ್ ಬಾಗಿಲು ಮುಚ್ಚುತ್ತವೋ ದೇವರೇ ಬಲ್ಲ.
50% ಅವಕಾಶ ಕೊಟ್ಟರೂ ನಾವು ಚಿತ್ರಮಂದಿರ ತೆರೆಯಲು ಸಿದ್ಧರಿದ್ದೇವೆ. ಆದರೆ ಸಿನಿಮಾದವರೇ ಮನಸು ಮಾಡೋದು ಕಷ್ಟ. 100% ಅವಕಾಶ ಸಿಗುವವರೆಗೂ ಅವರೂ ಧೈರ್ಯ ಮಾಡಲ್ಲ. ಸ್ಟಾರ್ ಸಿನಿಮಾ ರಿಲೀಸ್ ಮಾಡೋಕೆ ಪ್ಲಾನ್ ಮಾಡಬೇಕಿದೆ ಎಂದಿದ್ದಾರೆ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್.