` dharani - chitraloka.com | Kannada Movie News, Reviews | Image

dharani

  • ಶೃತಿ, ಶರಣ್ ಕುಟುಂಬದ ಮತ್ತೊಂದು ಕುಡಿ ಧರಣಿ ಪ್ರವೇಶ

    ಶೃತಿ, ಶರಣ್ ಕುಟುಂಬದ ಮತ್ತೊಂದು ಕುಡಿ ಧರಣಿ ಪ್ರವೇಶ

    ಆ ಕುಟುಂಬದಿಂದ ಚಿತ್ರರಂಗಕ್ಕೆ ಬಂದ ಮೊದಲ ಕುಡಿ ಶೃತಿ. ಸ್ತ್ರೀಪ್ರಧಾನ ಚಿತ್ರಗಳಿಗೆ ಹೊಸ ಸೆನ್ಸೇಷನ್ ತಂದು ಕೊಟ್ಟವರು. ಶೃತಿ ಅವರ ಜೊತೆಯಲ್ಲೇ ಶರಣ್ ಪೋಷಕ ನಟರಾಗಿ ಚಿತ್ರರಂಗಕ್ಕೆ ಬಂದು ಈಗ ಚಿತ್ರರಂಗದ ಡಿಮ್ಯಾಂಡ್ ಇರುವ ಸ್ಟಾರ್ ನಟ. ಈಗಾಗಲೇ ಶರಣ್ ಅವರ ಮಗ ಹೃದಯ್ ಗುರು ಶಿಷ್ಯರು ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ತಮ್ಮದೇ ಛಾಪು ಮೂಡಿಸಿದ್ದಾರೆ. ಈಗ ಶರಣ್-ಶೃತಿ ಅವರ ಕಿರಿಯ ಸಹೋದರಿ ಉಷಾ ಕೃಷ್ಣ ಅವರ ಮಗಳು ಕೀರ್ತಿ ಕೃಷ್ಣ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.

    ಮನೋಜ್ ನಾಯಕನಾಗಿ ನಟಿಸುತ್ತಿರುವ ʻಧರಣಿʼ ಫಸ್ಟ್ ಲುಕ್  ಪೋಸ್ಟರ್  ಮೂಲಕವೇ ಎಲ್ಲರ ಗಮನ ಸೆಳೆದಿತ್ತು. ಕೋಳಿ ಪಂದ್ಯದ ಜೊತೆಗೆ ಕಾಡುವ ಕಥೆಯೊಂದು ಈ ಚಿತ್ರದಲ್ಲಿದೆ ಅಂತಾ ಚಿತ್ರತಂಡ ಹೇಳಿಕೊಂಡಿತ್ತು. ಈಗ ಕೀರ್ತಿ ಆಯ್ಕೆಯಾಗುವ ಮೂಲಕ ʻಧರಣಿʼಯ ಕುರಿತು ಕ್ಯೂರಿಯಾಸಿಟಿ ಹೆಚ್ಚಾಗಿದೆ. ಸರಿ ಸುಮಾರು ಹನ್ನೆರಡು ವರ್ಷಗಳ ಹಿಂದೆ ತೆರೆ ಕಂಡಿದ್ದ ರಾಮ್ ಕುಮಾರ್ ಮತ್ತು ಶ್ರುತಿ  ಅಭಿನಯದ ʻಶ್ರೀ ನಾಗ ಶಕ್ತಿʼ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಮುಖಕ್ಕೆ ಬಣ್ಣ ಹಚ್ಚಿದ್ದವರು ಕೀರ್ತಿ. ವಿದ್ಯಾಭ್ಯಾಸದ ಕಾರಣಕ್ಕೆ ಚಿತ್ರರಂಗದಿಂದ ದೂರವೇ ಉಳಿದಿದ್ದರು. ಗ್ಲೋಬಲ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಕಾಲೇಜಿನಲ್ಲಿ ಬಿಬಿಎ ಮುಗಿಸಿರುವ ಕೀರ್ತಿ ಈಗ ಪೂರ್ಣ ಪ್ರಮಾಣದಲ್ಲಿ ಸಿನಿಮಾ ರಂಗದಲ್ಲಿ ತೊಡಗಿಸಿಕೊಳ್ಳುವ ಮನಸ್ಸು ಮಾಡಿದ್ದಾರೆ. ಈ ನಿಟ್ಟಿನಲ್ಲಿ ಸೂಕ್ತ ಕಥೆ ಸಿಕ್ಕರೆ ಮಾತ್ರ ಒಪ್ಪಬೇಕು ಅಂತಾ ಕಾದಿದ್ದ ಕೀರ್ತಿ ಮತ್ತು ಅವರ ಕುಟುಂಬದವರಿಗೆ ʻಧರಣಿʼಯ ಕತೆ ಅಪಾರವಾಗಿ ಇಷ್ಟವಾಗಿದ್ದರಿಂದ ಈ ಚಿತ್ರದ ಮೂಲಕ ನಾಯಕಿಯಾಗಲು ಒಪ್ಪಿಗೆ ನೀಡಿದ್ದಾರೆ.

    ಶರಣ್-ಶೃತಿ ಅವರ ಇಬ್ಬರು ತಾಯಂದಿರೂ ರಂಗಭೂಮಿಯಲ್ಲಿ ಕಲಾವಿದೆಯಾಗಿದ್ದವರು. ತಂದೆ ಕೃಷ್ಣ, ತಾಯಂದಿರಾದ ರಾಧಾ-ರುಕ್ಮಿಣಿ ಇಬ್ಬರೂ ರಂಗಭೂಮಿಯಲ್ಲಿ ಬಣ್ಣ ಹಚ್ಚಿದ್ದವರು. ಕಲೆಗೂ ಅವರಿಗೂ ಬಿಡಿಸಲಾಗದ ನಂಟು. ಧರಣಿ ಚಿತ್ರವನ್ನು ಅನಂತು ವರ್ಸಸ್ ನುಸ್ರತ್ ಖ್ಯಾತಿಯ ಸುಧೀರ್ ಶಾನುಭೋಗ್ ನಿರ್ದೇಶನ ಮಾಡುತ್ತಿದ್ದರೆ, ಯಂಗ್ ಥಿಂಕರ್ಸ್ ಫಿಲಂಸ್ ಲಾಂಛನದಲ್ಲಿ ಜಿ.ಕೆ.ಉಮೇಶ್ ಕೆ. ಗಣೇಶ್ ಐತಾಳ್ ಅವರು  ನಿರ್ಮಿಸುತ್ತಿದ್ದಾರೆ.