ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ, ನಿರ್ಮಾಪಕ ನಾಗತಿಹಳ್ಳಿ ಚಂದ್ರಶೇಖರ್ ಅವರ ಹೆಸರು ಆರ್.ಎಸ್.ಎಸ್.ನವರ ಒಂದು ಆಹ್ವಾನ ಪತ್ರಿಕೆಯಲ್ಲಿ ಮುದ್ರಿತವಾಗಿತ್ತು. ಜುಲೈ 16ರಂದು ನಿಜಗುಣ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿದ್ದ ಗುರುಪೂಜಾ ಉತ್ಸವದಲ್ಲಿ ನಾಗತಿಹಳ್ಳಿ ಭಾಗಿಯಾಗಬೇಕಿದ್ದ ಕಾರ್ಯಕ್ರಮ ಅದು. ನಾಗತಿಹಳ್ಳಿ ಮೇಷ್ಟ್ರಾಗಿದ್ದ ಕಾರಣ ಇದ್ದರೂ ಇರಬಹುದು ಎಂದುಕೊಂಡವರಿದ್ದರು. ಆದರೆ ಇದು ಎಡಪಂಥೀಯರ ಕೆಂಗಣ್ಣಿಗೆ ಬಿತ್ತು.
ಧರ್ಮ ಸಾಮರಸ್ಯದ ಪರ, ದ್ವೇಷ ರಾಜಕಾರಣದ ವಿರೋಧಿಯಾಗಿ ಗುರುತಿಸಿಕೊಂಡಿರುವ ನಾಗತಿಹಳ್ಳಿ ಚಂದ್ರಶೇಖರ್, ಧರ್ಮ ದ್ವೇಷದ ಮೂಲ ಎಂದು ಆರೋಪಿಸಲಾಗುವ ಆರ್ಎಸ್ಎಸ್ನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಬಗ್ಗೆ ಎಡಪಂಥೀಯರು ಅಕ್ರೋಶಗೊಂಡರು. ನಾಗತಿಹಳ್ಳಿ ಒಳ ಬಲಪಂಥೀಯ ಎಂದು ಟೀಕೆ ಮಾಡಿದ್ರು.
ಈ (ಆರ್ಎಸ್ಎಸ್) ಸಮಾರಂಭದಲ್ಲಿ ನಾನು ಭಾಗವಹಿಸುತ್ತಿಲ್ಲ. ಅದನ್ನು ನಾನು ಸ್ಪಷ್ಟಪಡಿಸಿಯೂ ಆಮಂತ್ರಣದಲ್ಲಿ ನನ್ನ ಹೆಸರು ಅಚ್ಚಾಗಿದೆ. ಅದು ‘ಆಕಸ್ಮಿಕ’ಎಂದು ಅವರು ಕ್ಷಮೆ ಯಾಚಿಸಿದ್ದಾರೆ. ಅಲ್ಲಿಗೆ ವಿಷಯ ಮುಕ್ತಾಯಗೊಂಡಿದೆ. ಆ ದಿನಾಂಕದಂದು ನಾನು ದೂರದ ದೇಶದಲ್ಲಿ ಚಿತ್ರೀಕರಣದಲ್ಲಿರುವುದು ನನ್ನನ್ನು ಬಲ್ಲವರಿಗೆಲ್ಲ ತಿಳಿದಿದೆ. ನನ್ನನ್ನು ಅತ್ಯಂತ ಹತ್ತಿರದಿಂದ ಬಲ್ಲ, ನನ್ನನ್ನು ನಂಬುವ,ನನ್ನನ್ನು ಪ್ರೀತಿಸುವ, ನನ್ನನ್ನು ಬೆಳೆಸಿರುವ, ನನ್ನೊಂದಿಗೆ ಹಳ್ಳಿಯ ಕೆಲಸದಲ್ಲಿ ಕೈಜೋಡಿಸಿರುವ ಅಕ್ಕರೆಯ ಎಲ್ಲ ಮನಸ್ಸುಗಳಿಗೆ ಹೇಳುವ ಒಂದು ಮಾತು: ನಾನು ಏನಾಗಿದ್ದೀನೋ ಅದೇ ಆಗಿ ಇರುತ್ತೇನೆ. ನಾನು ಏನು ಮಾಡುತ್ತಿದ್ದೀನೋ ಅದು ಸರಿ ಇದೆ. ಅದನ್ನೇ ಮುಂದುವರೆಸುತ್ತೇನೆ ಎಂದು ಸ್ಪಷ್ಟನೆ ಕೊಟ್ಟರು.
ಟೀಕೆ ಮಾಡಿದವರಿಗೆ ತಪ್ಪು ತಿಳಿಯಲು,ತಪ್ಪು ಹರಡಲು ತುದಿಗಾಲಲ್ಲಿ ನಿಂತವರನ್ನು, ನಿತ್ಯ ಹೊಸ, ಹುಸಿ ರೋಮಾಂಚನ ಬಯಸುವ ಮಹನೀಯರನ್ನು ಮನ್ನಿಸಿ ಮುಂದೆ ಹೋಗೋಣ. ಇಲ್ಲಿ ನಾವೆಲ್ಲ ಮಾಡಲೇಬೇಕಾದ ಜನಪರ ಕೆಲಸಗಳು ಬಹಳಷ್ಟಿವೆ. ಮಾಡೋಣ. ಇನ್ನು ಮಾತು ಸಾಕು ಎಂದಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ್.
ಹೀಗೆ ಎಡಪಂಥೀಯರ ಆಕ್ರೋಶಕ್ಕೆ ಉತ್ತರ ಕೊಟ್ಟ ನಂತರ ಬಲಪಂಥೀಯರು ಮುಗಿಬಿದ್ದಿದ್ದಾರೆ. ಆರ್ಎಸ್ಎಸ್ ಬಗ್ಗೆ ನಿಮ್ಮ ನಿಲುವು ಏನು ಎಂದು ಸ್ಪಷ್ಟನೆ ಕೊಡಿ ಎಂದು ಎಡಪಂಥೀಯರು ಮುಗಿಬಿದ್ದಂತೆಯೇ, ಇಂತಹ ಡ್ರಾಮ ಏಕೆ. ನಿಮ್ಮಂತಹವು ಆರ್ಎಸ್ಎಸ್ಗೆ ಬೇಕಿಲ್ಲ ಎಂದು ಬಲಪಂಥೀಯರು ಕೂಡಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.