ದುನಿಯಾ ವಿಜಯ್. ಈಗ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಗೆಳೆಯರೊಂದಿಗೆ. ಪಾನಿಪುರಿ ಕಿಟ್ಟಿಯ ಅಣ್ಣನ ಮಗ ಮಾರುತಿ ಗೌಡನ ಮೇಲೆ ಹಲ್ಲೆ ಮಾಡಿರೋ ಕೇಸ್ನಲ್ಲಿ ಜಾಮೀನು ಕೂಡಾ ಸಿಗದೆ ಜೈಲು ಪಾಲಾಗಿದ್ದಾರೆ ದುನಿಯಾ ವಿಜಿ. ಮಿಸ್ಟರ್ ಬೆಂಗಳೂರು ಕಾಂಪಿಟೇಷನ್ ಮುಗಿದ ಮೇಲೆ ನಡೆದಿರೋ ಘಟನೆ ಇದು. ದುನಿಯಾ ವಿಜಿ ಮಗನನ್ನು ಕಿಟ್ಟಿ ಕಡೆಯ ಹುಡುಗರು ಏನೋ ಅಂದರಂತೆ. ಅದಕ್ಕೆ ವಿಜಿ ಮಾರುತಿ ಗೌಡನನ್ನು ಕಾರ್ನಲ್ಲಿ ಕಿಡ್ನಾಪ್ ಮಾಡಿ, ಸುಮಾರು ಎರಡು ಗಂಟೆ `ಪ್ರೀತಿಯಿಂದ ಬುದ್ದಿ ಹೇಳಿ' ಕಳಿಸಿಕೊಟ್ಟಿದ್ದಾರಂತೆ. ಅದು ಸ್ಟೇಷನ್ ಮೆಟ್ಟಿಲೇರಿ ಕೇಸ್ ಆಗಿ ಈಗ ಜೈಲು ಸೇರಿದ್ದಾರೆ ದುನಿಯಾ ವಿಜಿ.
ದುನಿಯಾ ವಿಜಿ ಏಕಾಏಕಿ ಸ್ಟಾರ್ ಆದವರಲ್ಲ. ಸಣ್ಣ ಪುಟ್ಟ ಪಾತ್ರಗಳನ್ನು ಮಾಡಿಕೊಂಡಿದ್ದ ವಿಜಿಯ ಹಣೆಬರಹ ಬದಲಿಸಿದ್ದು ದುನಿಯಾ. ಒಂದೇ ಚಿತ್ರದಿಂದ ಸ್ಟಾರ್ ಆದ ದುನಿಯಾ ವಿಜಿಗೆ ಆ ಸ್ಟಾರ್ಡಂನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅದಕ್ಕೆ ಸಾಕ್ಷಿ
ಪದೇ ಪದೇ ಮಾಡಿಕೊಂಡ ಗಲಾಟೆಗಳು. ಸ್ಟಾರ್ ಆದ ಮೇಲೆ ಸಾರ್ವಜನಿಕ ಜೀವನದಲ್ಲಿ ಇರಬೇಕಾದ ರೀತಿಯೇ ಬೇರೆ. ಆದರೆ ಅದಕ್ಕೆ ಸಂಪೂರ್ಣ ವ್ಯತಿರಿಕ್ತವಾಗಿದ್ದವರು ವಿಜಿ.
ದುನಿಯಾ ವಿಜಿಯ ಸಿನಿಮಾಗಳಿಗಿಂತ ಹೆಚ್ಚಾಗಿ ಅವರ ವಿವಾದಗಳೇ ಅತೀ ಹೆಚ್ಚು ಸದ್ದು ಮಾಡಿದವು. ಮೊದಲ ಪತ್ನಿ ನಾಗರತ್ನ ಜೊತೆ ಗಲಾಟೆ, ಜೀವ ಬೆದರಿಕೆ, ವೃದ್ಧರೊಬ್ಬರಿಗೆ ಹೊಡೆದ ಘಟನೆ, ಮಾಸ್ತಿಗುಡಿ ದುರಂತದ ವೇಳೆ ನಿರ್ಮಾಪಕರನ್ನು ಬಂಧಿಸಲು ಹೋದ ಪೊಲೀಸರಿಗೆ ಯಾಮಾರಿಸಿದ ಘಟನೆ, ದಾವಣಗೆರೆ ಶಾಸಕರೊಬ್ಬರ ಮಗಳ ಮದುವೆ ಮಾಡಿಸಿದ ಪ್ರಕರಣ, ಕೀರ್ತಿಗೌಡ ಜೊತೆ 2ನೇ ಮದುವೆ.. ಹೀಗೆ ಸಾಲು ಸಾಲು ಪ್ರಕರಣಗಳಿವೆ. ಇಂತಹ ಗಲಾಟೆಗಳು, ದುನಿಯಾ ವಿಜಿಯ ಒಳ್ಳೆಯ ಕೆಲಸಗಳನ್ನೆಲ್ಲ ಸೈಡಿಗೆ ತಳ್ಳಿಬಿಟ್ಟವು. ದಂಡ ಕಟ್ಟಲೂ ಹಣವಿಲ್ಲದೆ ಜೈಲು ಸೇರಿದ್ದ ಎಷ್ಟೋ ಜನ ನಿರಪರಾಧಿ ಖೈದಿಗಳಿಗೆ ಜೀವನ ಕೊಟ್ಟಿರುವ ವಿಚಾರವಾಗಲೀ, ಗೆಳೆಯರಿಗೆ ಬದುಕು ಒದಗಿಸಿಕೊಟ್ಟ ವಿಚಾರವಾಗಲೀ.. ಯಾರಿಗೂ ಗೊತ್ತಾಗಲೇ ಇಲ್ಲ.
ಈಗ ಮತ್ತೊಮ್ಮೆ.. ನೆಗೆಟಿವ್ ಸುದ್ದಿಯಿಂದಲೇ ಸುದ್ದಿಯಾಗಿದ್ದಾರೆ ವಿಜಿ. ಮಗನನ್ನು ದೊಡ್ಡ ಮಟ್ಟದಲ್ಲಿ ಲಾಂಚ್ ಮಾಡೋಕೆ ಕುಸ್ತಿ ಸಿನಿಮಾಗೆ ತಯಾರಾಗುತ್ತಿರುವ ವಿಜಿ, ಇನ್ನು ಮುಂದಾದರೂ ಸಾರ್ವಜನಿಕ ಜೀವನದಲ್ಲಿ ಹೇಗಿರಬೇಕು ಅನ್ನೋದನ್ನ ಕಲಿತುಕೊಳ್ತಾರಾ..? ಅದು ಎಲ್ಲರನ್ನೂ ಕಾಡುವ ಪ್ರಶ್ನೆಯೂ ಹೌದು. ನಿರೀಕ್ಷೆಯೂ ಹೌದು.
Related Articles :-
Duniya Vijay In Trouble