ಟಗರು. ಶಿವಣ್ಣ ಕೆರಿಯರಿನಲ್ಲಿಯೇ ವಿಭಿನ್ನವಾದ ಸಿನಿಮಾಗಳಲ್ಲೊಂದು. ಪೊಲೀಸ್ ಪಾತ್ರಕ್ಕೆ ಹೊಸದೇ ಮೆರುಗು ಕೊಟ್ಟ ಟಗರು, ಅದೇ ಚಿತ್ರದಿಂದ ಸ್ಟಾರ್ ಆದ ಡಾಲಿ ಧನಂಜಯ, ಚಿಟ್ಟೆ ವಸಿಷ್ಠ ಸಿಂಹ, ಟಗರು ಬಂತು ಟಗರು ಹಾಡಿನ ಮೂಲಕ ಚರಣ್`ರಾಜ್, ಟಗರುಪುಟ್ಟಿ ಎಂದೇ ಖ್ಯಾತರಾದ ಕೆಂಡಸಂಪಿಗೆ ಮಾನ್ವಿತಾ.. ಹೀಗೆ ಚಿತ್ರದ ಸ್ಟಾರ್`ಗಳ ಪಟ್ಟಿ ತುಂಬಾ ದೊಡ್ಡದು. ಇದೀಗ ದುನಿಯಾ ಸೂರಿ ಮತ್ತು ಜಯಣ್ಣ ಮತ್ತೆ ಒಂದಾಗಿದ್ಧಾರೆ.
ಬಹಳ ದಿನಗಳ ನಂತರ ನಿರ್ದೇಶಕ ಸೂರಿ ಮತ್ತು ನಿರ್ಮಾಪಕರಾದ ಜಯಣ್ಣ ಹಾಗೂ ಬೋಗೇಂದ್ರ ಹೊಸ ಸಿನಿಮಾವೊಂದಕ್ಕೆ ಕೆಲಸ ಮಾಡುತ್ತಿದ್ದಾರೆ. ಕಿಸ್ ಸಿನಿಮಾ ಖ್ಯಾತಿಯ ನಟ ವಿರಾಟ್ ನಟನೆಯ ಚಿತ್ರಕ್ಕಾಗಿ ಟಗರು ನಿರ್ದೇಶಕ ಸೂರಿ ಮತ್ತು ಜಯಣ್ಣ ಫಿಲಂಸ್ ಕೈಜೋಡಿಸಲಿದ್ದಾರೆ.
ಇದೇ ಸಂಸ್ಥೆಯಲ್ಲಿ ದಿನಕರ್ ತೂಗುದೀಪ ನಿರ್ದೇಶನದ ಚಿತ್ರವೊಂದರಲ್ಲೂ ನಟಿಸುತ್ತಿರುವ ವಿರಾಟ್, ಅದು ಮುಗಿದ ನಂತರ ದುನಿಯಾ ಸೂರಿ ಚಿತ್ರದಲ್ಲಿ ನಟಿಸಲಿದ್ದಾರೆ.
ತಮ್ಮ ಚೊಚ್ಚಲ ನಿರ್ದೇಶನದ ದುನಿಯಾ ಚಿತ್ರದಿಂದಲೂ ನಿರ್ಮಾಪಕ ಜಯಣ್ಣ ಅವರೊಂದಿಗೆ ಸುದೀರ್ಘ ಒಡನಾಟವಿದೆ. ವಾಸ್ತವವಾಗಿ, ಜಯಣ್ಣ ಅವರ ಬೆಂಬಲವಿಲ್ಲದೆ ದುನಿಯಾ ಚಿತ್ರಮಂದಿರಗಳಿಗೆ ಬರುತ್ತಿರಲಿಲ್ಲ. ಅವರು ಸಿನಿಮಾವನ್ನು ದೊಡ್ಡ ಪರದೆಯ ಮೇಲೆ ತರಲು ನನಗೆ ಸಹಾಯ ಮಾಡಿದರು. ಅಂದಿನಿಂದ, ನಾವು ಸ್ನೇಹ ಸಂಬಂಧ ಹೊಂದಿದ್ದೇವೆ. ಅವರು ನನ್ನ ಚಿತ್ರಗಳಿಗೆ ವಿತರಕರಾಗಿದ್ದಾರೆ ಮತ್ತು ನನ್ನ ಯೋಜನೆಗಳಿಗೆ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ ಎನ್ನುತ್ತಾರೆ.ಬ್ಯಾಡ್ ಮ್ಯಾನರ್ಸ್ ನಿರ್ಮಾಪಕ ಸುಧೀರ್ ಅವರ ಉತ್ತಮ ಸ್ನೇಹಿತರಾಗಿರುವ ಜಯಣ್ಣ ಅವರು ಆ ಚಿತ್ರದ ಥಿಯೇಟರ್ ರಿಲೀಸ್ ಅನ್ನು ಸಹ ನೋಡಿಕೊಳ್ಳುತ್ತಿದ್ದಾರೆ. ಜಯಣ್ಣ-ಭೋಗೇಂದ್ರ ಬ್ಯಾನರ್ ನನ್ನ ಹೋಮ್ ಬ್ಯಾನರ್`ನಂತೆಯೇ ಎಂದು ಪ್ರೀತಿಯಿಂದ ಹೇಳುತ್ತಾರೆ ಸೂರಿ.
ಸುರೇಂದ್ರನಾಥ್ ಮತ್ತು ಅಮ್ರಿ ಈಗಾಗಲೇ ಸ್ಕ್ರಿಪ್ಟ್ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಹೀರೋ ವಿರಾಟ್ ಈಗಾಗಲೇ ಜಾಕಿ ಜಾಕಿ ಹಾಡಿನಲ್ಲಿ ಕಾಣಿಸಿಕೊಂಡಿದ್ದಾರಂತೆ. ನನಗೆ ಅವರು ನೆಚ್ಚಿನ ನಿರ್ದೇಶಕ. ಅವರ ಜೊತೆ ಸಿನಿಮಾ ಮಾಡುವ ಅವಕಾಶ ಮಾಡಿಕೊಟ್ಟಿರುವ ಜಯಣ್ಣ ಅವರಿಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು ಎನ್ನುವುದು ಹೀರೋ ವಿರಾಟ್ ಮಾತು.