ಶೃತಿ ಹರಿಹರನ್, ಅರ್ಜುನ್ ಸರ್ಜಾ ಹೆಸರಲ್ಲಿ ಕಿರುಕುಳದ ಆರೋಪ ಮಾಡಿದ್ದಾರೆ. ಸರಿ. ಆಗ ನನಗೆ ಧೈರ್ಯ ಇರಲಿಲ್ಲ. ಈಗ ಮೀಟೂ ಅಭಿಯಾನದಿಂದಾಗಿ ಧೈರ್ಯ ಬಂದಿದೆ ಎನ್ನುವುದನ್ನೂ ಒಪ್ಪಬಹುದು. ಆದರೆ, ಶೃತಿ ಹರಿಹರನ್ ಕೆಲವೊಂದು ಪ್ರಶ್ನೆಗಳಿಗೆ ಉತ್ತರಿಸಲೇಬೇಕಿದೆ.
ಪ್ರಶ್ನೆ 1 : ಶೃತಿ ಹರಿಹರನ್, ತಮಗಾದ ಅನುಭವವನ್ನು ವಿಸ್ಮಯ ಚಿತ್ರತಂಡದ ನಿರ್ದೇಶಕ, ನಿರ್ಮಾಪಕ ಸೇರಿದಂತೆ ಯಾರೊಬ್ಬರ ಗಮನಕ್ಕೂ ತಂದಿಲ್ಲ ಏಕೆ..? ಶೃತಿ ಆರೋಪದ ಬಗ್ಗೆ ವಿಸ್ಮಯ ಚಿತ್ರತಂಡದ ಯಾರೊಬ್ಬರಿಗೂ ಮಾಹಿತಿ ಇಲ್ಲವೇ..? ವೈಯಕ್ತಿಕವಾಗಿಯೂ ಯಾರ ಬಳಿಯೂ ಅವರು ಈ ವಿಷಯ ಹೇಳಿಕೊಂಡಿಲ್ಲವೇ..?
ಪ್ರಶ್ನೆ 2 : ವಿಸ್ಮಯ ಚಿತ್ರದಲ್ಲಿ ಅರ್ಜುನ್ ಸರ್ಜಾ ಜೊತೆ ಕೆಟ್ಟ ಅನುಭವ ಆಗಿತ್ತು. ವೃತ್ತಿ ಪರತೆಯಿಂದಾಗಿ ನಾನು ಸನಿಮಾದಲ್ಲಿ ಮುಂದುವರಿದೆ ಎಂದಿದ್ದಾರೆ ಶೃತಿ. ಅಷ್ಟು ಕೆಟ್ಟ ಅನುಭವವಾಗಿದ್ದರೆ, ಚಿತ್ರದ ಪ್ರೆಸ್ಮೀಟುಗಳಲ್ಲಿ, ಪ್ರೀಮಿಯರ್ ಶೋಗಳಲ್ಲಿ ಅದೇ ಅರ್ಜುನ್ ಸರ್ಜಾ ಬಗ್ಗೆ ಹೊಗಳಿದ್ದು ಏಕೆ..? ನಾನು ಅವರ ಅಭಿಮಾನಿ. ಅವರ ಜೊತೆ ಇನ್ನಷ್ಟು ಮತ್ತಷ್ಟು ಚಿತ್ರಗಳಲ್ಲಿ ನಟಿಸುವ ಕನಸಿದೆ ಎಂದು ಹೇಳಿಕೊಂಡಿದ್ದುದು ಏಕೆ..? ಅದು ವೃತ್ತಿಪರತೆಯ ಭಾಗವೇನೂ ಅಲ್ಲ. ಅಲ್ಲವೇ..?
ಪ್ರಶ್ನೆ 3 : ಸಾಕ್ಷಿ ಇದೆ ಅಂತೀರಿ. ಕೋರ್ಟ್ನಲ್ಲಷ್ಟೇ ತೋರಿಸ್ತೀವಿ ಅಂತೀರಿ. ತಮಗಾದ ಮೀಟೂ ಅನುಭವ ಬಯಲು ಮಾಡಲು ಬಳಸಿಕೊಂಡ ಸಾಮಾಜಿಕ ಜಾಲತಾಣದಲ್ಲೇ ಅದನ್ನು ತೋರಿಸಬಹುದಲ್ಲಾ..? ಕೋರ್ಟ್ನಲ್ಲೇ ಹೇಳುವುದಾಗಿದ್ದರೆ, ಕೋರ್ಟ್ನಲ್ಲೇ ಕೇಸು ಹಾಕಬಹುದಿತ್ತು. ಆರೋಪ ಮಾಡೋಕೆ ಸಾಮಾಜಿಕ ಜಾಲತಾಣ, ಸಾಕ್ಷಿ ತೋರಿಸೋಕೆ ಕೋರ್ಟ್ ಏಕೆ..?
ಪ್ರಶ್ನೆ 4 : ಚಿತ್ರರಂಗದಲ್ಲಿ ಈ ರೀತಿ ಕಿರುಕುಳಕ್ಕೊಳಗಾಗುವವರಿಗೆ ಸಹಾಯ, ನೆರವು ನೀಡಲೆಂದೇ ಕೆಲವು ಸಂಸ್ಥೆಗಳಿವೆ. ಫಿಲಂ ಚೇಂಬರ್, ಕಲಾವಿದರ ಸಂಘ, ನಿರ್ಮಾಪಕರ ಸಂಘ, ನಿರ್ದೇಶಕರ ಸಂಘಗಳೂ ಇವೆ. ಇಲ್ಲಿ ದೂರು ನೀಡಲು ಸಾಧ್ಯವಾಗದೇ ಹೋದರೆ, ಚಿತ್ರರಂಗದ ಹಿರಿಯರ ಗಮನಕ್ಕಾದರೂ ತರಬಹುದಿತ್ತು. ಯಾರೊಬ್ಬರಿಗೂ ಈ ಬಗ್ಗೆ ಮಾಹಿತಿಯೇ ಇಲ್ಲ.
ಪ್ರಶ್ನೆ 5 : ಈ ಮೊದಲು ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದರು ಶೃತಿ. ಶೃತಿ ಆ ಹೇಳಿಕೆ ನೀಡುವಷ್ಟು ಹೊತ್ತಿಗೆ ವಿಸ್ಮಯ ಚಿತ್ರ ಮುಗಿದಿತ್ತು. ಆಗಲೂ ಶೃತಿ ಹೆಸರು ಹೇಳಿರಲಿಲ್ಲ. ಹಲವಾರು ಬಾರಿ ಅನುಭವಗಳಾಗಿವೆ ಎಂದಿದ್ದ ಶೃತಿ, ಈ ಬಾರಿ ಮಾತ್ರ ಅರ್ಜುನ್ ಸರ್ಜಾ ಹೆಸರು ಹೇಳಿದ್ದಾರೆ. ಅಷ್ಟೇ ಅಲ್ಲ, ಹಲವಾರು ಅನುಭವಗಳಾಗಿವೆ ಎನ್ನುತ್ತಿರುವ ಅವರು ಹೊರಗೆ ಬಿಟ್ಟಿರುವುದು ಅರ್ಜುನ್ ಸರ್ಜಾ ಹೆಸರನ್ನು ಮಾತ್ರ. ಉಳಿದ ಎಲ್ಲ ಅನುಭವಗಳನ್ನೂ ಹೇಳಿಕೊಂಡಿಲ್ಲ. ಏಕೆ..?