`ನಾನು ಪಾರ್ವತಿ' ಚಿತ್ರಲೋಕ ಪ್ರಕಾಶನದ, ಖ್ಯಾತ ಸಾಹಿತಿ ಜೋಗಿ ಅವರು ಬರೆದಿರುವ ಕೃತಿ. ಪಾರ್ವತಮ್ಮನವರೇ ಹೇಳಿಕೊಂಡ ಅವರ ಬದುಕಿನ ಸವಾಲುಗಳು, ಸಂಕಟಗಳ ಕುರಿತ ಕಥೆ. ಅದು ಪ್ರತಿಯೊಬ್ಬ ಹೆಣ್ಣುಮಗಳಿಗೂ ಸ್ಫೂರ್ತಿಯಾಗಬಲ್ಲ ಕಥೆ. ಪುಸ್ತಕವನ್ನೋದಿದ ಶಿವರಾಜ್ಕುಮಾರ್, ತಮ್ಮ ತಾಯಿಯ ಇನ್ನೂ ಕೆಲವು ಮುಖಗಳನ್ನು ತೆರೆದಿಟ್ಟಿದ್ದಾರೆ. ಓವರ್ ಟು ಶಿವರಾಜ್ ಕುಮಾರ್.
ಇಂದು ನಾವು ಏನಾಗಿದ್ದೇವೋ, ಅದು ಆ ತಾಯಿ ನಮಗೆ ಕೊಟ್ಟ ಭಿಕ್ಷೆ. ನಮ್ಮ ಮನೆಯಲ್ಲಿ ಅಪ್ಪಾಜಿ, ವರದಣ್ಣ, ಪಾರ್ವತಮ್ಮನವರ ಕುಟುಂಬದವರು ಹೀಗೆ ಎಲ್ಲರೂ ಇದ್ದರು. ಅವರೆಲ್ಲರನ್ನೂ ಪ್ರೀತಿಯಿಂದಲೇ ನಿಭಾಯಿಸಿದ್ದು ಅಮ್ಮ. ಎಲ್ಲರನ್ನೂ ಒಂದುಗೂಡಿಸಿಕೊಂಡು ಹೋಗುವುದು ಹೇಗೆ ಅನ್ನೋದನ್ನು ಹೇಳಿಕೊಟ್ಟಿದ್ದೇ ಅಮ್ಮ.
ಇನ್ನು ನಮ್ಮ ವಿಚಾರಕ್ಕೆ ಬಂದರೆ, ಅಪ್ಪು ಬಾಲ್ಯದಿಂದಲೇ ಸ್ಟಾರ್ ಆಗಿಬಿಟ್ಟ. ನನ್ನ ವಿಚಾರದಲ್ಲಿ ಅಮ್ಮ ಎಷ್ಟು ಕೇರ್ ತೆಗೆದುಕೊಂಡರೆ, ನಾನು ಆರಂಭದಿಂದಲೇ ಎಲ್ಲ ರೀತಿಯ ಪಾತ್ರಗಳ ಅನುಭವವನ್ನೂ ಪಡೆದೆ. ಆನಂದ್ನ ಕಾಲೇಜ್ ಬಾಯ್, ಮನ ಮೆಚ್ಚಿದ ಹುಡುಗಿಯ ಹಳ್ಳಿ ಹುಡುಗ, ಶಿವ ಮೆಚ್ಚಿದ ಕಣ್ಣಪ್ಪನ ಭಕ್ತ, ಇನ್ಸ್ಪೆಕ್ಟರ್ ವಿಕ್ರಂನ ಕಾಮಿಡಿ.. ಹೀಗೆ ನನ್ನ ವೃತ್ತಿ ಜೀವನದ ಆರಂಭದ ದಿನಗಳಲ್ಲಿ ಎಲ್ಲ ಮಾರ್ಗದರ್ಶನ ನೀಡಿ ಬದುಕು ರೂಪಿಸಿದ ಅಮ್ಮ, ನಾನು ಪಕ್ವ ಎನಿಸಿದ ಮೇಲೆ ಸ್ವಾತಂತ್ರ್ಯ ಕೊಟ್ಟರು. ಅದು ಅವರು ನನ್ನನ್ನು ಬೆಳೆಸಿದ ರೀತಿ. ಅವರು ಹೇಳಿಕೊಟ್ಟ ಅಂದಿನ ಪಾಠಗಳೇ ಇಂದಿಗೂ ನನ್ನನ್ನು ಮುನ್ನಡೆಸುತ್ತಿವೆ.
ಅವರು ಕೇವಲ ನಮ್ಮ ಮನೆಯವರಿಗಷ್ಟೇ ಅಲ್ಲ, ಚಿತ್ರರಂಗದ ಹಲವರಿಗೆ ತಾಯಿಯೇ ಆಗಿದ್ದರು ಎಂದು ತಾಯಿಯೊಂದಿಗಿನ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ ಶಿವ ರಾಜ್ಕುಮಾರ್.
`ನಾನು ಪಾರ್ವತಿ' ಕೃತಿಯಲ್ಲಿ ಒಬ್ಬ ವೃತ್ತಿಶೀಲ ಹೆಣ್ಣು ಮಗಳು ಎದುರಿಸಿದ ಸವಾಲುಗಳಿವೆ. ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಸೂತ್ರಗಳೂ ಇವೆ. ಒಬ್ಬ ತಾಯಿಯ ಅಂತಃಕರಣವೂ ಇದೆ. ಕಲೆ, ಸಂಸ್ಕøತಿ, ಸಾಹಿತ್ಯದ ಸ್ಪರ್ಶವೂ ಇದೆ. ಪಾರ್ವತಮ್ಮ ರಾಜ್ಕುಮಾರ್ ಅವರ ಜೀವನ ಮತ್ತು ಸಾಧನೆ, ಕಥೆಯಷ್ಟೇ ಅಲ್ಲ. ಸ್ಫೂರ್ತಿಯೂ ಹೌದು.